ಆಧ್ಯಾತ್ಮ ವಿಭಾಗ

ಮಂಕುತಿಮ್ಮನ ಕಗ್ಗ – ಭಾಗ -5-ಬರಹ :ಡಾ || ನಾಗೇಶ್ . ಎಲ್ .
ದಾಸರೋ ನಾವೆಲ್ಲ ಶುನಕನಂದದಿ ಜಗದ ।
ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥
ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು ।
ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ ||
ನಾವೆಲ್ಲ ಆಸೆ ವ್ಯಾಮೋಹ ವಾಂಚೆಗಳಿಗೆ ದಾಸರಾಗಿದ್ದೇವೆ. ಜೀವನವೆಲ್ಲ ಆಸೆಗಳ ಹಿಂದೆ ಓಡುತ್ತಿರುತ್ತೇವೆ. ಆಸೆಗಳ ಒಂದು ನಿರಂತರ ಪಟ್ಟಿ ಸದಾ ಸಿದ್ಧವಾಗಿರುತ್ತದೆ. ಹೇಗೆ ನಾಯಿ ವಾಸನೆ ಬೀಸಿದ ದಿಕ್ಕಿನಲ್ಲಿ ವಾಸನೆಯನ್ನು ಅನುರಿಸಿ ಚಡಪಡಿಸುತ್ತದೆಯೋ ಹಾಗೆಯೇ ನಾವು ಸಹ ಸದಾ ಚಡಪಡಿಸುತ್ತಿರುತ್ತೇವೆ. ಆಸೆಗಳ ಬ್ಯಾಸ್ಕೆಟ್ ಎಂದು ಖಾಲಿಯಾಗುವುದಿಲ್ಲ .ಆಸೆಗಳೆಂಬ ಪಾಶಗಳು ಹೊರಗಿದ್ದಾವೆ .ಅಂದರೆ ನಾವು ಆಸೆ ಪಡುವ ವಿಷಯಗಳು ಸಾಮಗ್ರಿಗಳು ಬಾಹ್ಯ ಪ್ರಪಂಚದಲ್ಲಿದೆ. ಆ ಸಾಮಗ್ರಿಗಳಿಗೆ ತಮ್ಮ ಆಸೆಗಳೆಂಬ ಪಾಶಗಳು ಬಿಗಿದುಕೊಂಡಿವೆ. ಆದರೆ ಒಂದು ಸೂಕ್ಷ್ಮ ವಿಷಯವೆಂದರೆ ಈ ಪಾಶಗಳು ನಮ್ಮ ಒಳಗಿರುವ ಕೊಂಡಿಗಳಿಗೆ ತಗಲಿ ಹಾಕಿಕೊಳ್ಳುತ್ತವೆ. ಡಿವಿಜಿಯವರು ಇಲ್ಲಿ ತಿಳಿಸುವ ಮುಖ್ಯ ವಿಚಾರವೆಂದರೆ ಹೊರಗಿರುವ ವಸ್ತು ವಿಷಯ ಸಾಮಗ್ರಿಗಳು ತಮ್ಮ ಪಾಡಿಗೆ ತಾವರಲಿ ಅವುಗಳ ತಗಲು ಹಾಕಿಕೊಂಡಿರುವ ಪಾಶಗಳು ಇರಲಿ ಆದರೆ ಆ ಪಾಶಗಳು ನಮ್ಮೊಡನೆ ಬಂಧಿಸಲು ನೆರವಾಗುವ ಕೊಂಡಿಗಳು (hooks)ಆ ಕೊಂಡಿಗಳನ್ನು ನಾವು ಕಳಚಿ ಹಾಕಬೇಕು.
ಅದನ್ನೇ ವೈರಾಗ್ಯ ಎಂದು ಕರೆಯುತ್ತಾರೆ .ಆಸೆಗಳ ಕ್ಷಯವೇ ಮೋಕ್ಷವೆಂದು ತಿಮ್ಮ ಗುರು ಹೇಳುತ್ತಾರೆ .ಬುದ್ಧದೇವ ಅದಕ್ಕೆ ಹೇಳಿದ್ದು ಆಶಯೇ ದುಃಖಕ್ಕೆ ಕಾರಣವೆಂದು.
ಅದಕ್ಕೆ ಪೂರಕವಾದ ಮರುಳ ಮುನಿಯನ ಕಗ್ಗದ ಪದ್ಯದಿಂದ ನಾನು ಐದನೆಯ ಸಂಚಿಕೆಯ ಬರಹ ಮುಕ್ತಾಯ ಮಾಡುತ್ತೇನೆ .
ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ |
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ ||
ಚಟ್ಟಕ್ಕೆ ನಿನ್ನನೇರಿಪ ಮುನ್ನ ನೀನಾಗಿ |
ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ ||

ಮಂಕುತಿಮ್ಮನ ಕಗ್ಗದ ಬಗ್ಗೆ ಉದಾಹರಣೆ ಸಹಿತ ಮಾತು : ಮಾತನಾಡಿರುವವರು : ಶ್ರೀಮತಿ ಸುಧಾಶ್ರೀನಾಥ್
ಕೆಳಗಿನ ಆಡಿಯೋ ಲಿಂಕ್ ಒತ್ತಿ ಕೇಳಿ
ಭಹಳ ಚನ್ನಾಗಿದೆ. ಓದಿ ಬಹಳ ಸಂತೋಷ ವಾಯಿತು