ಆಧ್ಯಾತ್ಮ ವಿಭಾಗ

ಅಧ್ಯಾತ್ಮ ವಿಭಾಗ

ಮಂಕುತಿಮ್ಮನ ಕಗ್ಗ – ಭಾಗ -3

ಬರಹ :

ಡಾ || ನಾಗೇಶ್ . ಎಲ್ .

ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು ।
ಭೂವಿಷಯದಿಂದ ರಸ ಮಾರ್ಪಡುವುದುಂಟು ।।
ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ ।
ಸೇವಕನು ನೀನಲ್ತೆ ? ಮಂಕುತಿಮ್ಮ ।।

ಭಗವದ್ಗೀತೆ ಎರಡನೇ ಅಧ್ಯಾಯ ಸಂಖ್ಯೆ ಯೋಗದ 47ನೇ ಶ್ಲೋಕ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।

ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಘೋದ್ಯಸ್ತ್ವಕರ್ಮಣಿ॥

ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ ಯೋಗದ ಮುಖ್ಯ ಸೂತ್ರವನ್ನು ವಿವರಿಸಿ ಹೇಳುತ್ತಾನೆ

ಅರ್ಜುನ, ನಿನಗೆ ಕರ್ಮ ಮಾಡಲು ಮಾತ್ರ ಹಕ್ಕಿದೆ .ಆದರೆ ಕರ್ಮಫಲದ ಮೇಲೆ ಯಾವ ಹಕ್ಕು ಇಲ್ಲ. ಅದನ್ನು ನಿರ್ದೇಶಿಸುವ ಶಕ್ತಿ ಮತ್ತೊಂದಿದೆ . ಕರ್ಮಫಲ ತ್ಯಾಗವೇ ಮುಕ್ತನ ಲಕ್ಷಣ .ಕರ್ಮವನ್ನು ತ್ಯಾಗ ಮಾಡುವುದಲ್ಲ .ಕರ್ಮಫಲವನ್ನು ತ್ಯಾಗ ಮಾಡುವುದು ಬಹು ಮುಖ್ಯ .ಇದೇ ಜೀವನದ ಮುಖ್ಯ ಸೂತ್ರವಾಗಬೇಕು.

ಇದೇ ಅರ್ಥವನ್ನು ಕೊಡುವ ಒಂದು ಕಗ್ಗವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುತ್ತಿದ್ದೇನೆ. ಈ ಕಗ್ಗದಲ್ಲಿ ಡಿವಿಜಿಯವರು ಹೇಳುತ್ತಾರೆ “ಮಾವಿನ ಸಸಿ ತಂದು ನೀವು ಭೂಮಿಯಲ್ಲಿ ನೆಟ್ಟರೂ ಕೆಲವು ಬಾರಿ ಅದು ಬೇವನ್ನು ನೀಡುವ ಸಾಧ್ಯತೆ ಇದೆ. ಆತಂಕ ಪದುವುದು ಬೇಡ. ಕಾರಣವೇನೆಂದರೆ ಈ ಮರ್ತ್ಯ ಲೋಕವೇ ಹಾಗೆ. ಭೂಮಿ ವಿಷಯಗಳು (ಆಶೆಗಳು ) ಸ್ಪರ್ಶ ಮಾತ್ರದಿಂದ ಸಿಹಿರಸವನ್ನು ಕಹಿಯಾಗಿಸುತ್ತದೆ. ಫಲಿತಾಂಶದ ಬಗ್ಗೆ ನೀನು ಚಿಂತಿಸಬೇಡ. ಅದು ಈ ತೋಟದೊಡೆಯ, ಅಂದರೆ ಪರಮಾತ್ಮನಿಗೆ ಸಂಬಂಧಿಸಿದ್ದು .ಆತ ಅದನ್ನು ತೀರ್ಮಾನಿಸುತ್ತಾನೆ. ನೀನು ಏನಿದ್ದರೂ ತೋಟದಲ್ಲಿನ ಸೇವಕ ಮಾತ್ರ.”

ಹಾಗೆಂದ ಮಾತ್ರಕ್ಕೆ “ಎಲ್ಲವನ್ನು ದೇವರೇ ತೀರ್ಮಾನ ಮಾಡುವಹಾಗಿದ್ದರೆ ನಾವೇನು ಮಾಡಬೇಕು ?”ಎಂಬ ಅನುಮಾನ ಬರುವುದರಿಂದ ಇನ್ನೊಂದು ಶ್ಲೋಕವನ್ನು ಹಾಕಿದ್ದೇನೆ.

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ ।
ಸನ್ನಾಹ ಸಾಗೀತೆ? ದೈವವೊಪ್ಪೀತೆ ।।
ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ ।
ನಿನ್ನ ಬಲವನ್ನು ಮೆರೆಸೋ – ಮಂಕುತಿಮ್ಮ ।।

ನನ್ನಿಂದ ಏನೂ ಸಾಧ್ಯವಿಲ್ಲ .ಕಾರಣ, ಫಲಿತಾಂಶ ನನ್ನ ಕೈಯಲ್ಲಿ ಇಲ್ಲ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಭಗವಂತ ನಮಗೆ ದೇಹ ಶಕ್ತಿಯನ್ನು ,ಬುದ್ಧಿಶಕ್ತಿಯನ್ನು ಕೊಟ್ಟು ಕಳಿಸಿದ್ದಾನೆ. ಆದ್ದರಿಂದ ನಾವು, ಸುಮ್ಮನೆ ಕೂಡುವುದು ತಪ್ಪಲ್ಲವೇ? ನಮ್ಮ ಮೇಲಿರುವ ಜವಾಬ್ದಾರಿಯನ್ನು ದೈವದ ಭುಜಕ್ಕೆ ಏರಿಸುವುದು ಸರಿಯಲ್ಲ .ಹಾಗೆ ಮಾಡುವುದಾದರೆ , ಪುರುಷ ಪ್ರಯತ್ನಕ್ಕೆ ಬೆಲೆ ಇಲ್ಲದಂತಾಗುತ್ತದೆ. ಅಂತಹ ನಮ್ಮ ಸಣ್ಣವನ್ನು ಅಥವಾ ಯೋಚನೆಯನ್ನು ದೈವ ಒಪ್ಪುವುದಿಲ್ಲ. ನಮಗೆ ಭಗವಂತ ಕೊಟ್ಟಿರುವ ಸಾಮರ್ಥ್ಯವನ್ನು ,ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಂಡು, ಜೀವನದ ಎಲ್ಲಾ ಸಂದರ್ಭಗಳನ್ನು ಎದುರಿಸಿ ನಿಲ್ಲಬೇಕು .ನಮ್ಮ ಸಮಸ್ಯೆಗಳು ಅಥವಾ ಕಷ್ಟಗಳ ಪರಿಹಾರಕ್ಕಾಗಿ ಭಗವಂತನನ್ನು ಪ್ರಾರ್ಥಿಸುವುದು ತಪ್ಪಲ್ಲ. ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡದೇ ಹೋದರೆ ಅದು ಮೂರ್ಖತನವಾದೀತು .ಭಗವಂತ ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬಹುದು ಅಥವಾ ಒಪ್ಪಿಕೊಳ್ಳದೆ ಇರಬಹುದು .ಆದರೆ ನಮ್ಮ ಪುರುಷ ಪ್ರಯತ್ನವನ್ನು ಮೆರೆಸಿ ನಾವು ಸಂತೋಷವಾಗಿರಬೇಕು. ಸೋಮಾರಿತನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರವೃತ್ತಿ .ಜಡತ್ವ ನಮ್ಮ ಪ್ರಗತಿಯ ಪಥದಲ್ಲಿ ಸಾಧ್ಯವಿಲ್ಲ. ಮಾಡಬೇಕಾದದ್ದು ಏನೋ ಅದನ್ನು ಮಾಡಲೇಬೇಕು.